ವಿವೇಚನಾರಹಿತ ಪಟ್ರೋಲ್ ಬೆಲೆ ಏರಿಕೆಗೆ ನಿಮ್ಮ ಪ್ರತಿರೋಧವಿರಲಿ
ಆತ್ಮೀಯ ಹೊಸತು ಓದುಗ ಬಂಧುಗಳೆ,
ತೈಲ ಕಂಪನಿಗಳು ಮತ್ತೆ ಪೆಟ್ರೋಲ್ ಬೆಲೆ ಏರಿಕೆ ಮಾಡಿವೆ. ಈ ಬಾರಿ ಆದು ಪ್ರತಿ ಲೀಟರ್ ಮೇಲೆ ೮.೨೪
ರೂಪಾಯಿಗಳಷ್ಟು ಹೆಚ್ಚಿದೆ. ಡೀಸೆಲ್, ಸೀಮೆಎಣ್ಣೆ ಹಾಗೂ ಎಲ್.ಪಿ.ಜಿ.ಯ ಬೆಲೆ ಏರಿಕೆಗೂ
ತಯಾರಿ ನಡೆದಿದೆ. ಕೇಂದ್ರ ಸರಕಾರದ ವಕ್ತಾರರು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ತೈಲ
ಬೆಲೆಯ ಕಡೆಗೆ ಕೈ ತೋರಿಸಿ ಮೌನವಾಗಿದ್ದಾರೆ. ಕೇಂದ್ರದ ಅಧಿಕಾರಾರೂಢ ಕಾಂಗ್ರೆಸ್ ಪಕ್ಷ
ತೈಲೋದ್ಯಮದ ಮೇಲಿನ ನಿಯಂತ್ರಣವನ್ನು ಸರಕಾರ ಹಿಂತೆಗೆದುಕೊಂಡಿದೆ. ಇದು ಮುಕ್ತ
ಮಾರುಕಟ್ಟೆ ವ್ಯವಸ್ಥೆ, ಜಾಗತೀಕರಣದ ಪರಿಣಾಮ, ವ್ಯಾಪಾರಿ ಸಂಸ್ಥೆಗಳ ಪರವಾದ ನಿಲುವು.
ದೇಶದ ಪ್ರತಿಯೊಬ್ಬ ಪ್ರಜೆ ಈ ಬೆಲೆ ಏರಿಕೆಗೆ ಬಲಿಯಾಗುತ್ತಾನೆ. ಸಾರ್ವಜನಿಕ
ಸಾರಿಕೆ, ಸರಕು ಸಾಗಣೆ (ಅತ್ಯಾವಶ್ಯಕ ಆಹಾರಧಾನ್ಯ, ಔಷಧಿ, ದಿನಬಳಕೆ ವಸ್ತುಗಳನ್ನು
ಸೇರಿ) ಎಲ್ಲ ಬೆಲೆಯೂ ಜನಸಾಮಾನ್ಯರ ನಿಯೋಜಿತ ಬಜೆಟ್ ಅನ್ನು ಮೀರಿಹೋಗುತ್ತದೆ. ೨೦೧೦
ಸೆಪ್ಟೆಂಬರ್ ದಿಂದ ಇಂದಿನವರೆಗೆ ೧೨ ಬಾರಿ ಬೆಲೆ ಏರಿಸಲಾಗಿದೆ. ೨೦೧೦ರಲ್ಲಿ ೫೧.೮೩ ರೂ.
ಇದ್ದದ್ದು ಈಗ ೮೧.೭೫ ರೂ.ಗೆ ತಲುಪಿದೆ. ದೇಶದಲ್ಲಿಯೇ ಹೆಚ್ಚು ಬೆಲೆ ನಮ್ಮ
ರಾಜ್ಯದಲ್ಲಿ.
ಪೆಟ್ರೋಲ್ ಮೂಲದರ ೪೫ ರೂಪಾಯಿ. ಮಾರಟ ತೆರಿಗೆ, ಅಬ್ಕಾರಿ ತೆರಿಗೆ, ಆಮದು ತೆರಿಗೆ
ಹೀಗೆ ಎಲ್ಲ ತೆರಿಗೆಗಳೂ ಸೇರಿ ಈಗ ೮೧.೭೫ ರೂಪಾಯಿ ಕೊಡಬೇಕಿದೆ. ಕಳೆದ ೫ ವರ್ಷದ
ಅವಧಿಯಲ್ಲಿ ೧೮ ಲಕ್ಷ ಕೋಟಿಯಷ್ಟು ಹಣವನ್ನು ಕಾರ್ಪೊರೇಟ್ ಕಂಪನಿಗಳಿಗೆ ತೆರಿಗೆ
ವಿನಾಯಿತಿ ನೀಡಿದ್ದಾರೆ. ಕರ್ನಾಟಕ ಸರಕಾರ ತನ್ನ ಪಾಲಿನ ತೆರಿಗೆ ಭಾಗವನ್ನು ಕೈಬಿಟ್ಟು
ಪೆಟ್ರೋಲ್ ಬೆಲೆ ಭಾರ ತಗ್ಗುವಂತೆ ಮಾಡಬಹುದು (ಗೋವಾ ರಾಜ್ಯ ಮಾತ್ರ ಆ ಕೆಲಸ ಮಾಡಿದೆ).
ದಯಮಾಡಿ ಈ ಕೆಲಸ ಮಾಡಿ. ಈ ಕೆಳಗೆ ರಾಷ್ಟ್ರಪತಿ, ಪ್ರಧಾನಿ, ಹಣಕಾಸು ಸಚಿವರ
ಜಾಲತಾಣ/ಮಿಂಚಂಚೆ ಕೊಟ್ಟಿದ್ದೇವೆ. ಪ್ರತಿಯೊಬ್ಬರು ಪತ್ರ ಬರೆಯಿರಿ, ಇ-ಮೇಲ್ ಕಳಿಸಿರಿ,
ನಿಮ್ಮ ಸ್ನೇಹಿತರಿಗೂ ಹೇಳಿ. ಅವರ ಸ್ನೇಹಿತರಿಗೂ ಹೇಳಲು ಹೇಳಿ, ಲಕ್ಷಾಂತರ, ಕೋಟ್ಯಂತರ
ಜನರ ಪ್ರತಿರೋಧ ನಮ್ಮನ್ನಾಳುವವರಿಗೆ ತಿಳಿಯಲಿ.
ಸರಕಾರಕ್ಕೆ ಪರ್ಯಾಯ ಸಲಹೆಗಳು
* ಬಹುರಾಷ್ಟ್ರೀಯ ಕಂಪನಿಗಳಿಗೆ ನೀಡಿದ ತೆರಿಗೆ ವಿನಾಯಿತಿಗಳನ್ನು ರದ್ದುಮಾಡಿರಿ.
* ವಿವಿಧ ದೇಶಗಳ ಬ್ಯಾಂಕುಗಳಲ್ಲಿನ ನಮ್ಮ ದೇಶದ ಕಪ್ಪು ಹಣವನ್ನು ವಸೂಲಿ ಮಾಡಿ ಸರಕಾರದ ಬೊಕ್ಕಸಕ್ಕೆ ತನ್ನಿ.
*
ನಮ್ಮ ದೇಶದ ಕೈಗಾರಿಕೋದ್ಯಮಿಗಳು ನಮ್ಮ ಸಾರ್ವಜನಿಕ ಬ್ಯಾಂಕ್ಗಳಿಗೆ ಕಟ್ಟಬೇಕಾದ ಸಾಲದ
ಮೊತ್ತ ೭೪,೬೧೬ ಕೋಟಿ ಹಾಗೂ ಬಡ್ಡಿಯನ್ನು ವಸೂಲಿ ಮಾಡಿ ಮತ್ತು ಸರಕಾರಕ್ಕೆ ಕಟ್ಟದೆ ಉಳಿದ
ಸಾವಿರಾರು ಕೋಟಿ ಮೊತ್ತದ ಹಣವನ್ನು ಕಟ್ಟುನಿಟ್ಟಾಗಿ ವಸೂಲಿ ಮಾಡಿ.
ಈ ಎಲ್ಲ ಮೂಲಗಳಿಂದ ಬರುವ ಲಕ್ಷಾಂತರ ಕೋಟಿ ಹಣದಲ್ಲಿ ಸಾರ್ವಜನಿಕರ ಮೇಲಾಗುವ ಹೊರೆಯನ್ನು ತಪ್ಪಿಸಬೇಕು.
೧. ಶ್ರೀಮತಿ ಪ್ರತಿಭಾ ಪಾಟೀಲ್ (www.presidentofindia.nic.in)
೨. ಶ್ರೀ ಮನಮೋಹನ ಸಿಂಗ್ (www.pmindia.nic.in)
೩. ಶ್ರೀ ಪ್ರಣವ್ ಮುಖರ್ಜಿ (email : pkm@sansad.nic.in)